Published January 12, 2026 | Version v1
Journal article Open

ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಕನ್ನಡ ಸಾಹಿತ್ಯದ ಪಾತ್ರ

Description

ಈ ಸಂಶೋಧನಾ ಪ್ರಬಂಧವು ಕರ್ನಾಟಕ ಏಕೀಕರಣ ಚಳುವಳಿಯ ಆಂತರಿಕ ತತ್ತ್ವ, ಭಾವನಾತ್ಮಕ ಶಕ್ತಿ ಮತ್ತು ಸಾಂಸ್ಕೃತಿಕ ನೆಲೆಯನ್ನು ರೂಪಿಸುವಲ್ಲಿ ಕನ್ನಡ ಸಾಹಿತ್ಯ ವಹಿಸಿದ ಮಹತ್ವದ ಪಾತ್ರವನ್ನು ಆಳವಾಗಿ ವಿಶ್ಲೇಷಿಸುತ್ತದೆ. ಆಡಳಿತಾತ್ಮಕ ಪುನರ್‌ ಸಂಘಟನೆಯ ದೃಷ್ಟಿಯಲ್ಲಿ ಏಕೀಕರಣ ಚಳುವಳಿಯು ರಾಜಕೀಯ ಕ್ರಮಗಳಾಗಿ ಗೋಚರಿಸಿದರೂ, ಅದರ ಮನೋನಿರ್ಮಾಣ, ಸಾಂಸ್ಕೃತಿಕ ಸಮರ್ಥನೆ ಹಾಗೂ ಭಾಷಾ ಗುರುತಿನ ಸಂರಕ್ಷಣೆಯ ತತ್ತ್ವಾತ್ಮಕ ಬಲಗಳು ಸಾಹಿತ್ಯದಲ್ಲಿಯೇ ಅಡಕವಾಗಿದ್ದವೆಂದು ಈ ಅಧ್ಯಯನ ಪ್ರತಿಪಾದಿಸುತ್ತದೆ. 19ನೇ ಶತಮಾನದ ಕೊನೆಯಿಂದಲೇ ಕನ್ನಡನಾಡಿನ ರಾಜಕೀಯ ವಿಭಜನೆ ಭಾಷಾ ಅಸ್ತಿತ್ವದ ಸಂಕಟವನ್ನು ಉಂಟುಮಾಡಿದಾಗ, ಕವಿಗಳು, ಪ್ರಬಂಧಕಾರರು, ಇತಿಹಾಸಕರ್ತರು ಮತ್ತು ಪತ್ರಕರ್ತರು ಕನ್ನಡಿಗರಲ್ಲಿ ಒಗ್ಗಟ್ಟಿನ ಮನೋಭಾವವನ್ನು ಹುಟ್ಟುಹಾಕಿದರು. ಆಲೂರು ವೆಂಕಟರಾವ್, ಕುವೆಂಪು, ದ.ರಾ. ಬೇಂದ್ರೆ, ಮಂಜಮ್ಮ ಸುಳ್ಳಿಕೇರಿ, ಗೋವಿಂದ ಪೈ ಮೊದಲಾದ ಸಾಹಿತ್ಯಕರ್ತರ ಕೃತಿಗಳು ಕನ್ನಡ ಗುರುತು, ಸಂಸ್ಕೃತಿ ಮತ್ತು ನಾಡಭಾವನೆಗಳನ್ನು ಸಾಮೂಹಿಕ ಚೇತನದ ರೂಪಕ್ಕೆ ತಂದವು. ಕವಿತೆ, ನಾಟಕ ಮತ್ತು ಪ್ರಬಂಧ ಸಾಹಿತ್ಯವು “ಕರ್ನಾಟಕ” ಎಂಬ ಕಲ್ಪಿತ-ಸಾಂಸ್ಕೃತಿಕ ಸಮುದಾಯವನ್ನು ರೂಪಿಸುವಲ್ಲಿ ಮಾತ್ರವಲ್ಲ, ಭಾಷಾ ಹಕ್ಕು ಮತ್ತು ಏಕೀಕರಣದ ಅವಶ್ಯಕತೆಗಳನ್ನು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ತಂದವು. ಪ್ರಬುದ್ಧ ಕರ್ನಾಟಕ, ಜಯ ಕರ್ನಾಟಕ ಮೊದಲಾದ ಪತ್ರಿಕೆಗಳ ಮೂಲಕ ಏಕೀಕರಣ ಚಳುವಳಿಯ ತತ್ತ್ವವು ಜನಸಾಮಾನ್ಯರ ನಡುವೆ ವ್ಯಾಪಕವಾಗಿ ಹರಡಿತು.

Files

17. ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಕನ್ನಡ ಸಾಹಿತ್ಯದ ಪಾತ್ರ.pdf